ಬೆಂಗಳೂರು ಗ್ರಾಮಾಂತರ : ಪ್ರತಿಯೊಬ್ಬ ಮನುಷ್ಯನಲ್ಲಿಯೂ ಆಲೋಚನೆಗಳು ಮೂಡುವುದು ಸಹಜ. ಆದರೆ, ಆಲೋಚನೆಗಳು ಮೂಢನಂಬಿಕೆಗಳತ್ತ ಹೋಗದೆ ವೈಜ್ಞಾನಿಕ ಮನೋಭಾವದತ್ತ ಸಾಗಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದರು.
ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಯ ಉರ್ದು ಪ್ರೌಢಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ವಿಜ್ಞಾನ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಮಿಕ ದಿನಾಚರಣೆ ಹಾಗೂ ಕಾಯಕ ಯೋಗಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವುದರಿಂದ ಅದರ ಉಪಯೋಗ ಹಾಗೂ ಪರಿಣಾಮಗಳ ಕುರಿತು ಪ್ರಶ್ನೆಗಳು ಮೂಡುತ್ತಿವೆ. ಪ್ರಗತಿಪರ ಚಿಂತನೆ ಮತ್ತು ವಿಜ್ಞಾನದ ಅಳವಡಿಕೆಯಿಂದ ಮಾತ್ರ ಸಮಾಜದ ಬದಲಾವಣೆ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದರು

ಸ0ಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಮಾತನಾಡಿ, ಕಳೆದ ಆರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುತ್ತಿದ್ದೇವೆ. ನಮ್ಮ ಸಂಸ್ಥೆಯು ಮಾನಸಿಕ ಖಿನ್ನತೆಯ ರೋಗಿಗಳಿಗೆ ಉಚಿತ ಕೌನ್ಸಲಿಂಗ್ ಹಾಗೂ ಪ್ರತಿದಿನ ೧೨ ರೋಗಿಗಳಿಗೆ ಡಯಾಲಿಸಿಸ್ ಸೇವೆ ನೀಡುತ್ತಿದೆ.ಮೂಡ ನಂಬಿಕೆ ವಿರುದ್ದ ಜಾಗೃತಿ ಮೂಡಿಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಮೌನದಿಂದ ಬುದ್ಧ, ಕಾಯಕದಿಂದ ಬಸವಣ್ಣ ಹಾಗೂ ಲೇಖನಿಯ ಮೂಲಕ ಅಂಬೇಡ್ಕರ್ ಜಗತ್ತನ್ನು ಗೆದ್ದರು. ಇಂತಹ ಮಹನೀಯರ ಆದರ್ಶಗಳು ನಮಗೆ ದಾರಿದೀಪವಾಗಿವೆ ಎಂದರು.

ಗೌರವಾಧ್ಯಕ್ಷ ಡಾ. ವಿ.ಅಂಜಿನಪ್ಪ ಮಾತನಾಡಿ, ಬಸವಣ್ಣನವರ ತತ್ವದಂತೆ ಪ್ರತಿಯೊಬ್ಬರೂ ತಮ್ಮ ಕಾಯಕವನ್ನು ಪ್ರೀತಿಸಬೇಕು. ಕೋಳಿ ಮೊಟ್ಟೆಯನ್ನು ವೈಜ್ಞಾನಿಕವಾಗಿ ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗಿದ್ದು, ಉತ್ತಮ ಆರೋಗ್ಯಕ್ಕಾಗಿ ಸೇವಿಸಬಹುದು. ಕಾಯಕಯೋಗಿಗಳನ್ನು ಗುರ್ತಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಸನ್ಮಾನಿಸುತ್ತಿರುವುದು ಉತ್ತಮ ಕರ್ಯ ಎಂದರು.
ಜಿಲ್ಲಾಧ್ಯಕ್ಷ ಎಂ.ಆರ್. ಉಮೇಶ್ ಮಾತನಾಡಿ, ಕಾರ್ಮಿಕ ದಿನದ ಅಂಗವಾಗಿ ಗ್ರಾಪಂ ವಾಟರ್ಮೆನ್ಗಳು, ಸ್ವಚ್ಛತಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಗಿದೆ. ಸಾರ್ವಜನಿಕರಲ್ಲಿ, ವಿಶೇಷವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಪರಿಷತ್ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಾಯಕಯೋಗಿ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷ ತರಬಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ರವಿಕುಮಾರ್, ನೆಲಮಂಗಲ ತಾಲೂಕು ಅಧ್ಯಕ್ಷ ವಿಜಯಕುಮಾರ್, ದೇವನಹಳ್ಳಿ ತಾಲೂಕು ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಸೂಲಿಬೆಲೆ ಹೋಬಳಿ ಅಧ್ಯಕ್ಷ ನಯಾಜ್ ಖಾನ್, ಸೂಲಿಬೆಲೆ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ,ಕಿರಣ್, ಸಹಕಾರ ಬ್ಯಾಂಕ್ ಸಿಇಒ ಎಸ್.ಕೆ ವಸಂತ್ ಕುಮಾರ್, ಮೊರಾರ್ಜಿ ಪ್ರಾಂಶುಪಾಲ ವೆಂಕಟೇಶ್ ವಿ, ನಿರ್ದೇಶಕಿ ರಾಜೇಶ್ವರಿ ಶಿವಣ್ಣ, ಸುನಿತಾ ಉಮೇಶ್, ಪ್ರಭಾವತಿ, ಮಧು, ಸುಹಾಸ್, ಸುಭಾಷ್ ಹಾಗೂ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಜರಿದ್ದರು.


