ವಿಜಯ ನ್ಯೂಸ್ ,ಚಿಂತಾಮಣಿ ಮೇ.17
ಚಿಂತಾಮಣಿ ನಗರದ ಸಿವಿಲ್ ಬಸ್ ನಿಲ್ದಾಣದ ಬಳಿ ನಿಂತಿದ್ದ ಯುವಕನೊಬ್ಬನನ್ನು ಬಲವಂತವಾಗಿ ದ್ವಿಚಕ್ರ ವಾಹನದಲ್ಲಿ ಅಪಹರಿಸಿಕೊಂಡು ಹೋಗಿ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿರುವ ಘಟನೆ ನಡೆದಿದೆ.ಮಿಂಚಿನ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಏನೀದು ಘಟನೆ :
ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಗ್ರಾಮದ ನಿವಾಸಿ ಹೇಮಂತ್ ಕುಮಾರ್(27) ಮೇ 16 ರಂದು ಮಧ್ಯಾಹ್ನ ಚಿಂತಾಮಣಿಯ ಸಿವಿಲ್ ಬಸ್ ನಿಲ್ದಾಣದ ಬಳಿ ಇರುವ ಗುರು ಭವನದ ಮುಂಭಾಗ ರಸ್ತೆಯಲ್ಲಿ ನಿಂತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನೀನು ನಮ್ಮ ತಮ್ಮನಿಗೆ ಚಾಕುವಿನಿಂದ ಇರಿದು 24,000 ರೂ. ಕಿತ್ತುಕೊಂಡಿದ್ದೀಯಾ,ನಿನ್ನ ಫೋಟೋ ನಮ್ಮ ಬಳಿ ಇದೆ ಎಂದು ಸುಳ್ಳು ಆರೋಪ ಹೊರಿಸಿದ್ದಾರೆ. ಇದೇ ವೇಳೆ ಹೇಮಂತ್ ನನಗೆ ನೀವ್ಯಾರೋ ಗೊತ್ತಿಲ್ಲ ಎಂದಾಗ ಆರೋಪಿಗಳು ಚಾಕು ಹೊರತೆಗೆದು ಹೊಟ್ಟೆಗೆ ಇಟ್ಟು,ಕೊಲೆ ಮಾಡುವುದಾಗಿ ಹೆದರಿಸಿ ಬಲವಂತವಾಗಿ ತಮ್ಮ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಅಪಹರಿಸಿದ್ದರು ಎಂದು ಹೇಮಂತ್ ಪೊಲೀಸರಿಗೆ ತಿಳಿಸಿದ್ದಾರೆ.
ನಂತರ ಹೇಮಂತ್ನನ್ನು ಚೇಳುರು ರಸ್ತೆಯ ರೈಲ್ವೇ ಗೇಟ್ ದಾಟಿದ ಬಳಿಕ ಒಂದು ನಿರ್ಜನ ಪ್ರದೇಶದ ಇಟ್ಟಿಗೆ ಫ್ಯಾಕ್ಟರಿಯೊಳಗೆ ಕರೆದೊಯ್ಯದಿದ್ದಾರೆ.ಅಲ್ಲಿ ಮೊದಲೇ ಹೊಂಚು ಹಾಕಿ ಕುಳಿತಿದ್ದ ಮತ್ತಿಬ್ಬರು ಸೇರಿದಂತೆ ಒಟ್ಟು ಆರು ಜನ ದುಷ್ಕರ್ಮಿಗಳು ಸೇರಿಕೊಂಡು ಹೇಮಂತ್ ಕುತ್ತಿಗೆಯ ಮೇಲೆ ಮಚ್ಚು ಇಟ್ಟು 5 ಸಾವಿರ ನೀಡುವಂತೆ ಪೀಡಿಸಿದ್ದಾರೆ. ಹಣ ಇಲ್ಲವೆಂದಾಗ ಕೈ ಕಾಲಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.
ಇನ್ನೂ ದುಷ್ಕರ್ಮಿಗಳ ಮಚ್ಚು ಹಾಗೂ ಚಾಕುವಿನ ಬೆದರಿಕೆಗೆ ಹೆದರಿದ ಹೇಮಂತ್ ತಮ್ಮನಾದ ನಂದಕುಮಾರ್ ಗೆ ಕರೆ ಮಾಡಿ ಆರೋಪಿಗಳು ನೀಡಿದ ಮೊಬೈಲ್ ಸಂಖ್ಯೆಗೆ ತಮ್ಮನ ಮುಖಾಂತರ 5,000 ರೂ.ಗಳನ್ನು ಫೋನ್ ಪೇ ಮಾಡಿಸಿದ್ದಾರೆ.ಹಣ ವರ್ಗಾವಣೆಯಾದ ಬಳಿಕ ಹೇಮಂತ್ ಅವರ ಮೊಬೈಲ್ ಫೋನನ್ನು ದೂರಕ್ಕೆ ಎಸೆದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ನಗರ ಠಾಣೆಯ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಚಿಂತಾಮಣಿ ನಗರದ ಹೂರವಲಯದ ಕರಿಯಪಲ್ಲಿ ಮೂಲದ 22 ವರ್ಷದ ಬನ್ನಿ ಮತ್ತೊಬ್ಬ ಚಿಂತಾಮಣಿ ನಗರದ 21 ವರ್ಷದ ವಿಶ್ವನಾಥ್ ಈ ಇಬ್ಬರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಬಂಧಿತರು ಈ ಹಿಂದೆಯೂ ಸಹ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ಗೊತ್ತಾಗಿದೆ.ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

