ಹೊಸಕೋಟೆ : ಸರಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಜತೆಗೆ ಕಲಿಕೆಗೆ ಅಗತ್ಯವಾಗಿರುವ ಎಲ್ಲ ಸೌಲಭ್ಯಗಳು ಉಚಿತವಾಗಿ ಸಿಗುತ್ತಿದ್ದು,ಪೋಷಕರು ಖಾಸಗಿ ಶಾಲೆಗಳ ಮೋಹಕ್ಕೆ ಸಿಲುಕದೆ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಬೇಕು ಎಂದು ಸಮಾಜ ಸೇವಕ,ದಾನಿಗಳಾದ ಬಾಬು ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ಹೊಸಕೋಟೆ ತಾಲೂಕು ಮಾಕನಹಳ್ಳಿ ಸರಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಕ ವರ್ಗವಿದ್ದು,ಮಕ್ಕಳ ಸರ್ವತೋಮುಖ ಕಲಿಕೆಗೆ ಪೂರಕವಾಗಿರುವ ಎಲ್ಲ ಚಟುವಟಿಕೆಗಳು ಸಿಗುತ್ತಿವೆ.ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಗಣ್ಯರು ಸರಕಾರಿ ಶಾಲೆಗಳಲ್ಲಿ ಓದಿ ಉತ್ತಮ ಸ್ಥಾನಕ್ಕೆ ತಲುಪಿದ್ದಾರೆ.ಇದನ್ನು ಅರಿತುಕೊಂಡು ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಬೇಕು ಎಂದರು
ಗ್ರಾಪA ಮಾಜಿ ಸದಸ್ಯ ಮಧುಕುಮಾರ್ ಮಾತನಾಡಿ, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಮಾಜದ ಸಹಕಾರ ಅತ್ಯಗತ್ಯವಾಗಿದ್ದು, ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವ ಬಾಬು ಪ್ರಕಾಶ್ ಅವರ ಸೇವೆ ಶ್ಲಾಘನೀಯವಾಗಿದೆ. ಬಾಬು ಪ್ರಕಾಶ್ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾರದಲ್ಲಿ ಒಂದು ದಿನ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ವೃತ್ತಿಪರ ಹಾಗೂ ಕೌಶಲ್ಯಾಧಾರಿತ ಕಲಿಕೆಯ ವಿಶೇಷ ತರಗತಿಗಳನ್ನು ನಡೆಸುತ್ತಿದ್ದು, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ.ಇವರ ಸೇವೆ ಸ್ಮರಣೀಯವಾಗಿದೆ ಎಂದರು
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ಲೀಲಾ, ಸದಸ್ಯೆ ಭಾಗ್ಯಲಕ್ಷ್ಮಿ, ಸಹ ಶಿಕ್ಷಕಿ ವಿಜಯ ಪಿ.ಜೆ., ಅತಿಥಿ ಶಿಕ್ಷಕಿ ಹೇಮಲತಾ, ಸಹ ಶಿಕ್ಷಕ ಮಹಾಂತೇಶ್, ಎಸ್ಡಿಎಂಸಿ ಸದಸ್ಯೆ ನಗೀನಾ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

