ಹೊಸಕೋಟೆ : ಹದಿ ಹರೆಯದ ಯುವಕ ಯುವತಿಯರಲ್ಲಿ ಕಣ್ಣಿನ ಸಮಸ್ಯೆ ವ್ಯಾಪಕವಾಗಿ ಕಾಣಿಸುತ್ತಿದ್ದು, ಅತಿಯಾದ ಮೊಬೈಲ್ ಬಳಕೆ ಹಾಗೂ ಟಿವಿ ವೀಕ್ಷಣೆ ಇದಕ್ಕೆ ಕಣ್ಣಿಗೆ ಆಗುವ ಹಾನಿ ತಪ್ಪಿಸಲು ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರ ಇರಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಬಿ.ಟಿ ವಿಶ್ವನಾಥ್ ತಿಳಿಸಿದರು.
ನಗರದ ಮೇಧಶ್ರೀ ಶಾಲೆಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯ ಸೇವಿಸುತ್ತಿರುವ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಇರುವ ಕಾರಣ ಕಣ್ಣಿನ ನಿಶ್ಶಕ್ತಿಗೆ ಕಾರಣವಾದರೆ ಅತಿಯಾದ ಮೊಬೈಲ್ ಬಳಕೆ ಟಿವಿ ವೀಕ್ಷಣೆ ಕಣ್ಣಿನ ಮೇಲೆ ವ್ಯತೀರಿಕ್ತ ಪರಿಣಾಮ ಬೀರುತ್ತಿದೆ. ಇದರ ನಡುವೆ ಕಣ್ಣಿನ ರಕ್ಷಣೆ ಮಾಡಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಿ ಅಗತ್ಯ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದರು.
ಪ್ರಾAಶುಪಾಲ ಅಶ್ವತ್ ನಾರಾಯಣ ಮಾತನಾಡಿ , ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ಹೊಸಕೋಟೆ, ಕೋಲಾರ ಮಾಲೂರು ಸೇರಿದಂತೆ ಹಲವಾರು ಭಾಗಗಳಲ್ಲಿ ಉಚಿತ ನೇತ್ರತಪಾಸಣೆ ಶಿಬಿರ ಆಯೋಜಿಸಿ ಸಾವಿರಾರು ಜನರಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಉಚಿತವಾಗಿ ಕನ್ನಡಕಗಳನ್ನು ಕೊಟ್ಟಿದ್ದಾರೆ. ಇವರ ಸಾಮಾಜಿಕ ಬದ್ಧತೆ ಇತರರಿಗೆ ಮಾದರಿಯಾಗಿದೆ. ಕಣ್ಣುಗಳ ವಿಚಾರವಾಗಿ ಅವರು ಮೂಡಿಸುತ್ತಿರುವ ಜಾಗೃತಿ ಮತ್ತಷ್ಟು ಜನರಿಗೆ ಪ್ರೇರಣೆಯಾಗಿದೆ ಎಂದರು.
ಬ್ರಾಹ್ಮಣರ ಸಂಘದ ಕಾರ್ಯದರ್ಶಿ ವೈಜಿ ಮರಳಿಧರ್, ಮೇಧಶ್ರೀ ಶಾಲೆಯ ಕಾರ್ಯದರ್ಶಿ ಬೀರಪ್ಪ, ಕರ್ನಾಟಕರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್, ಶಂಕರಕಣ್ಣಿನ ಆಸ್ಪತ್ರೆ ಸಂಪನ್ಮೂಲ ವ್ಯಕ್ತಿ ಶಿವಣ್ಣ ಹಾಜರಿದ್ದರು.

