ಹೊಸಕೋಟೆ : ( april 20)
ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಹಾಗೂ ಮಹಿಳಾ ಸಬಲೀಕರಣ ಜಾರಿಗೆ ಮುಂದಾಗಿದ್ದೇ ಜಗಜ್ಯೋತಿ ಬಸವಣ್ಣನವರು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಹರಿಕಾರ, ಸಮಾನತೆಯನ್ನು ಸಾರುವ ಮೂಲಕ ಅನುಭವ ಮಂಟಪ ಸ್ಥಾಪಿಸಿ ಎಲ್ಲರೂ ಸಮಾನರು, ಮಹಿಳೆಯರಿಗೂ ಸಮಾನ ಹಕ್ಕು ಇದೆ ಎಂದು ಅಕ್ಕ ಮಹಾದೇವಿಯವರಿಗೆ ಅವಕಾಶ ನೀಡಿ ಬಸವ ವಚನಗಳ ಮೂಲಕ ಸಮಾಜದಲ್ಲಿನ ಮೂಡ ನಂಬಿಕೆ ತೊಡೆದು ಹಾಕಿ ಸಮಾನತೆ ಸಾರುವ ಮೂಲಕ ವಿಶ್ವದ ಮೊದಲ ಸಂವಿಧಾನ ಶಿಲ್ಪಿ ಎನಿಸಿಕೊಂಡರು. ಇವರ ಆದರ್ಶಗಳು ಸಮಾಜಕ್ಕೆ ದಾರಿ ದೀಪವಾಗಿವೆ ಎಂದರು

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭದ ತಾಲೂಕು ಅಧ್ಯಕ್ಷ ಗುರುಬಸಪ್ಪ ಮಾತನಾಡಿ, ತಾಲೂಕಿನಲ್ಲಿ ನಮ್ಮ ಸಮುದಾಯಕ್ಕೆ ಸಮುದಾಯ ಭವನ ಬೇಕಿದ್ದು, ಕಳೆದ ವರ್ಷ ಮನವಿ ಮಾಡಲಾಗಿತ್ತು. ಈ ಬಾರಿ ಜಾಗವನ್ನು ಗುರುತಿಸಲಾಗಿದೆ. ಕೂಡಲೇ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ಸದ್ಯ ಗುರುತಿಸಿರುವ ಜಾಗವನ್ನು ಸಮುದಾಯಕ್ಕೆ ಮಂಜೂರು ಮಾಡಬೇಕು. ಅದೇ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸೋಮಶೇಖರ್, ತಾಪಂ ಇಒ ಮುನಿಯಪ್ಪ, ನಗರಸಭೆ ಆಯುಕ್ತರಾದ ನೀಲಾ ಲೋಚನ ಪ್ರಭು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್ ರಾಜಶೇಖರ್, ತಾಲೂಕು ಉಪಾಧ್ಯಕ್ಷ ಮಧುಸುಧನ್, ಕಾರ್ಯದರ್ಶಿ ಕುಮಾರ್, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ.ಎಚ್.ಎಂ ಸುಬ್ಬರಾಜ್, ಜಿಪಂ ಮಾಜಿ ಸದಸ್ಯ ವೈಎಸ್ಎಂ ಮಂಜುನಾಥ್, ನಗರಸಭೆ ಸದಸ್ಯ ಗೌತಮ್, ತಾಲೂಕು ವೀರಶೈವ ಲಿಂಗಾಯತ ಸಂಘದ ಅಧಕ್ಷ ಶಿವಕುಮಾರ್, ಕಾರ್ಯದರ್ಶಿ ಪರಮೇಶ್, ಕಾರ್ತಿಕ್, ಮುಖಂಡರಾದ ದಯಾನಂದ್, ನಂದಕುಮಾರ್ ಸೇರಿ ಹಲವಾರು ಮುಖಂಡರು ಹಾಜರಿದ್ದರು.

