ಹೊಸಕೋಟೆ ಮೇ.25
ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶಿಷ್ಟ ಕಾರ್ಯಕ್ರಮದಲ್ಲಿ ಸುಮಾರು 140ಕ್ಕೂ ಹೆಚ್ಚು ಗರ್ಭಿಣಿಯರಿಗೆ ಅತ್ಯಂತ ಸಡಗರ-ಸಂಭ್ರಮದಿಂದ ಸಮೂಹ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಈ ಸಂಭ್ರಮಕ್ಕೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಪ್ರತಿಭಾ ಶರತ್ ಬಚ್ಚೇಗೌಡ ಅವರು ಸಾಕ್ಷಿಯಾದರು.ಗ್ರಾಮ ಪಂಚಾಯಿತಿಯ ಈ ವಿನೂತನ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಗರ್ಭಿಣಿಯರಿಗೂ ಶಾಸಕರ ಪತ್ನಿ ಪ್ರತಿಭಾ ಶರತ್ ಬಚ್ಚೇಗೌಡ ಅವರು ಸಾಂಪ್ರದಾಯಿಕವಾಗಿ ಅರಿಶಿನ-ಕುಂಕುಮ ನೀಡಿ, ಹೂವು, ಹಣ್ಣು, ಬಳೆ ಹಾಗೂ ಉಡುಗೊರೆಗಳನ್ನು ವಿತರಿಸಿ ಹರಸಿದರು
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ಅವರು, “ಗ್ರಾಮೀಣ ಭಾಗದ ಮಹಿಳೆಯರಲ್ಲಿ ಮಗುವಿನ ಆರೋಗ್ಯ ಹಾಗೂ ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. 140 ಮಹಿಳೆಯರಿಗೆ ಒಂದೇ ವೇದಿಕೆಯಲ್ಲಿ ಸೀಮಂತ ನೆರವೇರಿಸಿರುವುದು ಸಂತಸದ ವಿಷಯ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರಲಿ” ಎಂದು ಶುಭ ಹಾರೈಸಿದರು.

ಪ್ರತಿಭಾ ಶರತ್ ಬಚ್ಚೇಗೌಡ ಅವರು ಗರ್ಭಿಣಿಯರೊಂದಿಗೆ ಆತ್ಮೀಯವಾಗಿ ಬೆರೆತು ಅವರ ಆರೋಗ್ಯ ವಿಚಾರಿಸಿದರು. “ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರಿಗೆ ಮಾನಸಿಕ ಸಂತೋಷ ಮತ್ತು ಉತ್ತಮ ಆರೈಕೆ ಬಹಳ ಮುಖ್ಯ. ಇಂತಹ ಸೀಮಂತ ಕಾರ್ಯಕ್ರಮಗಳು ಅವರಲ್ಲಿ ಆತ್ಮವಿಶ್ವಾಸ ತುಂಬುತ್ತವೆ” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಾಂತರಾಜು , ಪಿಡಿಓ ಪ್ರಸಾದ್ , ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ , ಬಮೂಲ್ ನಿರ್ದೇಶಕ ಕೆಎಂಎಂ ಮಂಜುನಾಥ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಮುತ್ಕೂರು ಮುನಿರಾಜು, ಮಾಜಿ ಅಧ್ಯಕ್ಷ ಬಾಬು ರೆಡ್ಡಿ , ಹೊಸಕೋಟೆ ಯೋಜನಾ ಪ್ರಾಧಿಕಾರದ ಸದಸ್ಯ ಕೆ.ಸಿ.ಸುರೇಶ್ ಗೌಡ , ಮುಖಂಡರಾದ ಸಮೇತನಹಳ್ಳಿ ಸೊಣ್ಣಪ್ಪ , ಸದಸ್ಯರಾದ ಯಲ್ಲಪ್ಪ , ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಲತಾರೆಡ್ಡಿ , ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಸಮಾರಂಭಕ್ಕೆ ಆಗಮಿಸಿದ್ದ ಗರ್ಭಿಣಿಯರಿಗೆ ಮತ್ತು ಅವರ ಕುಟುಂಬದವರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.


