ಹೊಸಕೋಟೆ: ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಿರುವ ಸ್ಥಿತಿವಂತರು ಸಹಸ್ರಾರು ಸಂಖ್ಯೆಯಲ್ಲಿದ್ದು, ಅವರೆಲ್ಲರೂ ಬಡವರಿಗೆ ಸಹಾಯ ಹಸ್ತ ಚಾಚುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜನ ಜಾಗೃತಿ ಸೇವಾ ಟ್ರಸ್ಟ್ ಅಧ್ಯಕ್ಷ ಜೆ.ಎಂ. ಹಸೇನ್ ತಿಳಿಸಿದರು.
ನಗರದ ಕೆಇಬಿ ವೃತ್ತದಲ್ಲಿ ಜನಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಸೀರೆ ವಿತರಿಸಿ ಮಾತನಾಡಿದರು.
ಮನುಷ್ಯನಿಗೆ ಶ್ರೀಮಂತಿಕೆ ಎನ್ನವುದು ಹಣ, ಆಸ್ತಿ ಅಂತಸ್ತಿನಲ್ಲಿ ಇರುವ ಬದಲಾಗಿ ಹೃದಯ ಶ್ರೀಮಂತಿಕೆ ಎನ್ನುವುದನ್ನು ಮೆರೆಯಬೇಕು. ಸರಕಾರಗಳು ಎಷ್ಟೇ ಉಚಿತ ಯೋಜನೆಗಳನ್ನು ಕೊಟ್ಟರೂ ಸಹ ಬಡತನದಲ್ಲಿ ಇಂದಿಗೂ ಸಹ ಸಾಕಷ್ಟು ಜನ ಜೀವಿಸುತ್ತಿದ್ದಾರೆ. ಅಂತಹ ಬಡವರನ್ನು ಗುರ್ತಿಸಿ ಜನಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ನಿರಂತರವಾಗಿ ನೆರವಿನ ಹಸ್ತ ಚಾಚುತ್ತಿದ್ದೇವೆ. ಈ ಬಾರಿ ರಂಜಾನ್ ಹಾಗೂ ಯುಗಾದಿ ಹಬ್ಬಕ್ಕೆ ೫೦೦ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದ್ದು, ಸುಮಾರು ೧೦ ವರ್ಷಗಳಿಂದ ಈ ಸೇವೆ ಮಾಡಲಾಗುತ್ತಿದೆ ಎಂದರು.
ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಮಾತನಾಡಿ, ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎನ್ನುವ ಗಾದೆ ಮಾತಿನಂತೆ ನಮ್ಮ ಜೀವಿತಾವಧಿಯಲ್ಲಿ ಮಾಡುವ ದಾನ ಧರ್ಮದ ಕೆಲಸ ನಾವು ಸತ್ತಾಗಲೂ ನಮ್ಮ ಹಿಂದೆ ಬರುತ್ತದೆ. ನಾವು ಸಂಪಾದಿಸಿದ ಹಣವನ್ನು ಬಚ್ಚಿಟ್ಟರೆ ಅದು ನಾವು ಸತ್ತಾಗ ಇತರರ ಪಾಲಾಗುತ್ತದೆ. ಆದ್ದರಿಂದ ದುಡಿಮೆಯ ಅಲ್ಪ ಭಾಗವನ್ನು ದಾನ ಧರ್ಮ ಮಾಡಿದರೆ ಜನ ನಮ್ಮನ್ನು ಸ್ಮರಿಸುತ್ತಾರೆ. ಇಂತಹ ಕಾರ್ಯವನ್ನು ಜನ ಜಾಗೃತಿ ಸೇವಾ ಟ್ರಸ್ಟ್ ಅಧ್ಯಕ್ಷ ಜೆಎಂ.ಹಸೇನ್ ನಿರಂತರವಾಗಿ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ವಕೀಲ ಬಾಲಚಂದ್ರ, ಜನಜಾಗೃತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಆಸಿಫ್, ಮಾನವ ಹಕ್ಕುಗಳ ಜಾಗೃತಿ ಸಮಿತಿಅಧ್ಯಕ್ಷಎಂ.ಆರ್.ಉಮೇಶ್ ಸೇರಿದಂತೆ ಹಲವಾರುಗಣ್ಯರು ಹಾಜರಿದ್ದರು.

