ವಿಜಯನ್ಯೂಸ್ ,ಬೆಂಗಳೂರು
ಪ್ರೀತಿಯ ಹೆಸರಿನಲ್ಲಿ ಹುಚ್ಚು ಹಿಡಿಸಿಕೊಂಡ ಯುವಕನೊಬ್ಬ, ತನ್ನ ಮಾತಿಗೆ ಒಪ್ಪದ ಮೂರು ಮಕ್ಕಳ ವಿವಾಹಿತ ಮ ಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಈ ಘಟನೆ ಬೆಂಗಳೂರು ನಗರದ ಚಂದ್ರಲೇಔಟ್ ನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಫಿರ್ದೋಸ್ ಭಾನು ಎಂದು ಗುರುತಿಸಲಾಗಿದೆ. ಇವರಿಗೆ ಮದುವೆಯಾಗಿ ಮೂರು ಜನ ಮಕ್ಕಳಿದ್ದಾರೆ. ಸ್ಥಳೀಯ ಆಟೋ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಅಫೀಸ್ ಎಂಬಾತ ಕಳೆದ ಕೆಲವು ತಿಂಗಳಿನಿಂದ ಈಕೆಯ ಹಿಂದೆ ಬಿದ್ದು, “ನನ್ನನ್ನು ಪ್ರೀತಿಸು, ನನ್ನ ಜೊತೆ ಮಾತನಾಡು” ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ.
ಈ ಕಿರುಕುಳದ ಬಗ್ಗೆ ಫಿರ್ದೋಸ್ ಈ ಹಿಂದೆಯೇ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಕರೆಸಿ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಂಡಿದ್ದರು. ಆದರೆ ಗುಣ ಬದಲಾಗದ ಅಫೀಸ್, ಫಿರ್ದೋಸ್ ಅವರ ಓಡಾಟದ ಮೇಲೆ ನಿಗಾ ಇಟ್ಟಿದ್ದ .ಸಮಯ ಸಾಧಿಸಿದ ಅರೋಪಿ
ಫಿರ್ದೋಸ್ ಕೆಲಸದಲ್ಲಿದ್ದಾಗ ಅಲ್ಲಿಗೆ ಬಂದ, ಮತ್ತೆ ಮಾತನಾಡುವಂತೆ ಗಲಾಟೆ ಮಾಡಿದ್ದಾನೆ. ಈ ವೇಳೆ ವಾಗ್ವಾದ ವಿಕೋಪಕ್ಕೆ ಹೋಗಿ, ತನ್ನ ಬಳಿಯಿದ್ದ ಚಾಕುವಿನಿಂದ ಆಕೆಯ ಹೊಟ್ಟೆ ಮತ್ತು ಕೈಗಳಿಗೆ ಮನಬಂದಂತೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಫಿರ್ದೋಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೃತ್ಯ ಎಸಗಿದ ಬಳಿಕ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಬ್ಬ ಮಹಿಳೆಯ ಸುಂದರ ಸಂಸಾರ ಇಂದು ಈತನ ವಿಕೃತ ಮನಸ್ಥಿತಿಯಿಂದಾಗಿ ಬೀದಿಗೆ ಬಿದ್ದಿದೆ. ಘಟನೆ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

