ಬೆಂಗಳೂರು ಗ್ರಾಮಾಂತರ : ಕೇಂದ್ರ ಸರಕಾರದ ಮುಂಬರುವ ಖರೀದಿ ಋತುವಿನಲ್ಲಿ ಅಕ್ಕಿ ದಾಸ್ತಾನು, ಸಂಗ್ರಹಣೆ ಕಾರ್ಯ ಹಿನ್ನೆಲೆಯಲ್ಲಿ ಮೇ ಹಾಗೂ ಜೂನ್ ಮಾಹೆಯಲ್ಲಿ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಮೇ ತಿಂಗಳಲ್ಲಿ ಒಂದೇ ಬಾರಿಗೆ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ತಿಳಿಸಿದ್ದಾರೆ.
ಮೇ ಹಾಗೂ ಜೂನ್ ತಿಂಗಳ ಪಡಿತರವನ್ನು ಒಟ್ಟಿಗೆ ಪಡೆಯುವ ಸಂದರ್ಭದಲ್ಲಿ, ಪಡಿತರ ಚೀಟಿದಾರರು ತಾಂತ್ರಿಕ ದಾಖಲೀಕರಣಕ್ಕಾಗಿ ಎರಡು ಬಾರಿ ಪ್ರತ್ಯೇಕವಾಗಿ ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ನೀಡುವುದು ಕಡ್ಡಾಯವಾಗಿದೆ. ಎರಡು ಬಾರಿ ಬೆರಳು ಮುದ್ರೆ ನೀಡಿದ ನಂತರವಷ್ಟೇ ಮೇ ಮತ್ತು ಜೂನ್ ಮಾಹೆಯ ಎರಡು ತಿಂಗಳ ಪೂರ್ಣ ಪ್ರಮಾಣದ ಧಾನ್ಯ ಲಭ್ಯವಾಗಲಿದೆ.
ಪಡಿತರ ವಿತರಣೆಯಲ್ಲಿ ಏನಾದರೂ ಸಾರ್ವಜನಿಕ ಕುಂದುಕೊರತೆಗಳು ಕಂಡು ಬಂದಲ್ಲಿ ದೇವನಹಳ್ಳಿ-೯೪೪೯೨೬೯೦೦೧, ದೊಡ್ಡಬಳ್ಳಾಪುರ-೯೪೮೩೪೮೨೭೬೬, ನೆಲಮಂಗಲ-೯೦೩೬೪೩೪೫೫೨, ಹೊಸಕೋಟೆ-೯೯೦೨೮೦೫೫೬೩ ದೂರವಾಣಿ ಸಂಖ್ಯೆ ಹಾಗೂ ತಾಲ್ಲೂಕಿನ ಆಹಾರ ಶಾಖೆಯ ಆಹಾರ ಶಿರಸ್ತೇದಾರ್,ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ, ಪಡಿತರ ವ್ಯವಸ್ಥೆ ಸುಗಮವಾಗಿ ನಡೆಯಲು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

