ಹೊಸಕೋಟೆ : ತಾಲೂಕಿನ ಅನುಗೊಂಡಹಳ್ಳಿಯ ಇತಿಹಾಸ ಪ್ರಸಿದ್ಧ ಪುರಾತನ ಶ್ರೀ ಬಾಣೇಶ್ವರ ಸ್ವಾಮಿ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿ0ದ ನೆರವೇರಿತು.
ನಾಗಲಾಪುರ ವೀರ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜಶಲಿಂಗ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಶರತ್ ಬಚ್ಚೇಗೌಡ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.
ಕಳೆದ ಒಂದು ವಾರದಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಾದ್ಯ ಮೇಳದೊಂದಿಗೆ ಹೊರಟ ಭವ್ಯ ರಥಕ್ಕೆ ಭಕ್ತರು ಧವನ ಹಣ್ಣು ಸಮರ್ಪಿಸಿದರು. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಶ್ರೀ ಬಾಣೇಶ್ವರ ಸ್ವಾಮಿಯನ್ನು ಅಭೂತಪೂರ್ಣ ವಸ್ತ್ರಗಳು ಸುವರ್ಣ ಕಲಶಗಳು ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕೃತವಾದ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ರಥ ಸಾಗಿದ ಮಾರ್ಗದುದ್ದಕ್ಕೂ ವಿವಿಧ ಜಾನಪದ ಕಲಾ ತಂಡಗಳು ಆಕರ್ಷಣೀಯ ಪ್ರದರ್ಶನ ನೀಡಿದವು.ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಹಲವು ಸಂಘ ಸಂಸ್ಥೆಗಳು ಪಾನಕ, ನೀರು, ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಿ ಬಿಸಿಲ ಬೇಗೆಯಲ್ಲಿ ಭಕ್ತರ ಒಡಲು ತಂಪು ಮಾಡಿದವು.
ರಥೋತ್ಸವದಲ್ಲಿ ಶಾಸಕರೊಂದಿಗೆ , ಬಮೂಲ್ ನಿರ್ದೇಶಕ ಕೆಎಂಎ0 ಮಂಜುನಾಥ್, ಮುಖಂಡರಾದ ಭೊದನಹೊಸಳ್ಳಿ ಪ್ರಕಾಶ್ , ಪ್ರದೀಪ್ ಕುಮಾರ್, ಕಮಲಾಪತಿ ಸೇರಿದಂತೆ ಇನ್ನೂ ಹಲವು ಮುಖಂಡರು ದೇವಾಲಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು


